Avala Horata - 12 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 12

Featured Books
Categories
Share

ಅವಳ ಹೋರಾಟ - 12

ಬೆಳಿಗ್ಗೆ ಆಯ್ತು, ಶಿವರಾಜ ಈಗಷ್ಟೇ ಕೊಣೆಯಿಂದ ಹೊರಗಡೆ ಬಂದ, ದುರ್ಗಾ ಅಜ್ಜನ ಫೋಟೋ ನೋಡತಾ ಅಲ್ಲಿ ಕುಳಿತಿರುವುದನ್ನು ಅವನು ಗಮನಿಸಿದ. ಅವಳು ಕುರ್ಚಿಗೆ ಆಸರೆಯಾಗಿ ಅಜ್ಜನ ಫೋಟೋನೇ ನೋಡುತ್ತಾ ಇದ್ದಳು. ಅವಳ ಕಣ್ಣಿಂದ ನೀರು ಹಾಗೆ ಸುರಿಯುತ್ತಿತ್ತು. ಅದನ್ನು ನೋಡಿ ಶಿವರಾಜಗೆ ತುಂಬನೇ ಸಂಕಟ ಆಯ್ತು.
(ನನ್ನಿಂದ ನೀವು ಎಲ್ಲ ಎಷ್ಟು ಕಷ್ಟ ಅನುಭವಿಸಿದ್ದೀರಾ, ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ದುರ್ಗಾ) ಎಂದು ಮನಸಲ್ಲೇ ಅಂದುಕೊಳ್ಳುತ್ತಾ ಅವಳ ಹತ್ತಿರ ಬಂದ.

ಶಿವರಾಜ : ದುರ್ಗಾ, ದುರ್ಗಾ..

ದುರ್ಗಾ : (ಅವಳು ಎಚ್ಚೆತ್ತುಕೊಂಡು ಶಿವರಾಜನ್ನು ನೋಡಿದಳು, ಕಣ್ಣೀರು ಒರೆಸಿಕೊಂಡಳು) ಹಾ ದೊಡ್ಡಪ್ಪ, ಏನಾದ್ರು ಕೆಲಸ ಇತ್ತಾ?

ಶಿವರಾಜ : ಏನಿಲ್ಲ, ಅಮ್ಮ ತಿಂಡಿಗೆ ಅಂತ ಕರೀತಿದ್ದಾಳೆ ಒಳಗಡೆ ಹೋಗು.

ದುರ್ಗಾ : ಹಾ, ನೀವು ಬನ್ನಿ ಒಟ್ಟಿಗೆ ತಿಂಡಿ ಮಾಡೋಣ.

ಶಿವರಾಜ : ನಾನು ಈಗಷ್ಟೇ ಎದ್ದೆ, ಸ್ನಾನ ಅದು ಮಾಡಿಕೊಂಡು ಬರುತ್ತೇನೆ, ನೀವೆಲ್ಲ ತಿಂಡಿ ಮಾಡಿ (ಅಂತ ಹೇಳಿ ಅಲ್ಲಿಂದ ಹೊರಟ, ಈ ಕಡೆ ಸುಲೋಚನಾ, ದುರ್ಗಾ, ಪ್ರಸಾದ್  ಮತ್ತುರಾಜ ತಿಂಡಿ ಮಾಡುತ್ತಿದ್ದರು).

ದುರ್ಗಾ : ಅಜ್ಜಿ, ಪಂಚಾಯಿತಿಯಲ್ಲಿ ಅಜ್ಜನೇ ತೀರ್ಪು ಕೊಡ್ತಿದ್ದರು ಅಂತ ಹೇಳಿದ್ರಲ್ಲ, ಅದು ಹೇಗಿರ್ತಿತ್ತು?

ಸುಲೋಚನಾ : ನಾನು ಯಾವತ್ತೂ ಪಂಚಾಯಿತಿ ಕಟ್ಟೆಗೆ ಹೋಗಿಲ್ಲ, ಆದರೆ ಶಿವರಾಜ ಅದನ್ನು ನೋಡಿದ್ದಾನೆ(ಅಷ್ಟರಲ್ಲಿ ಶಿವರಾಜ ಅಲ್ಲಿಗೆ ತಿಂಡಿ ಮಾಡೋಕಂತ ಬಂದ).

ಪ್ರಸಾದ್ : ಅಪ್ಪ, ಅಜ್ಜ ಪಂಚಾಯಿತಿಯಲ್ಲಿ ಹೇಗೆ ಮಾತಾಡ್ತಿದ್ದರು ನೀವೂ ನೋಡಿದ್ದೀರಂತೆ ನಮಗೂ ಹೇಳಿ ಅಪ್ಪ.

ಶಿವರಾಜ : ಹ್ಮ್ ಹೇಳ್ತೀನಿ, ಆ ಪಂಚಾಯಿತಿಯಲ್ಲಿ ಅಪ್ಪ ಎಷ್ಟು ಗಂಭೀರವಾಗಿ ಇರುತ್ತಿದ್ದರು ಅಂದ್ರೆ ಆ ಸಂದರ್ಭದಲ್ಲಿ ಅವರನ್ನು ನೋಡಿ ನಾನು ತುಂಬ ಹೆದರುತ್ತಿದ್ದೆ. ಅವರ ತೀರ್ಪಿಗೆ ಯಾರೂ ಎದುರು ಮಾತಾಡ್ತಿರಲಿಲ್ಲ, ಯಾಕಂದ್ರೆ ಅವರ ತೀರ್ಪು ಯಾವತ್ತೂ ತಪ್ಪಾಗಲ್ಲ ಅನ್ನೋ ನಂಬಿಕೆ ಇಡೀ ಊರಿಗೆ ಇತ್ತು. ಅವರಿಗೆ ಇರೋ ಅಷ್ಟು ಧೈರ್ಯ, ಸ್ಥೈರ್ಯ ಯಾರಿಗೂ ಇರಲಿಲ್ಲ.

ಇದನ್ನೆಲ್ಲ ದುರ್ಗಾ ಶಾಂತಿಯಿಂದ ಕೇಳ್ತಾ ಕುಳಿತಿದ್ದಳು. ಆಗ ಶಿವರಾಜ ದುರ್ಗಾನ ನೋಡುತ್ತಾ—

ಶಿವರಾಜ : ಇನ್ನೊಂದು ವಿಷಯ ಗೊತ್ತಾ ಅಮ್ಮ, ನಮ್ಮ ಮನೆಯಲ್ಲಿ ಎಷ್ಟೋ ಜನ ಗಂಡು ಮಕ್ಕಳು ಇದ್ದೇವೆ, ಆದರೂ ಅಪ್ಪನಿಗೆ ಇರೋ ಆ ಧೈರ್ಯ, ಜಾನತನ ನನಗೆ ಕಾಣಿಸಿದ್ದು ದುರ್ಗಾಳಲ್ಲಿ ಮಾತ್ರ.

ಇದನ್ನು ಕೇಳಿ ದುರ್ಗಾಗೆ ತುಂಬನೇ ಆಶ್ಚರ್ಯ ಆಯ್ತು.

ದುರ್ಗಾ : ಏನು ಹೇಳ್ತಿದ್ದೀರ ದೊಡ್ಡಪ್ಪ, ನಾನೆಲ್ಲಿ ಅಜ್ಜ ಎಲ್ಲೆ, ಅವರಿಗೆ ಯಾರೂ ಹೋಲಿಕೆ ಆಗೋಕೆ ಸಾಧ್ಯನೇ ಇಲ್ಲ.

ಶಿವರಾಜ : ಸರಿಯಾಗಿ ಹೇಳ್ದೆ, ಅಪ್ಪಗೆ ಯಾರಿಗೂ ಹೋಲಿಕೆ ಇಲ್ಲ. ಆದರೆ ಆ ಕಳೆ ನಾನು ನೋಡಿದ್ದು ನಿನ್ನಲ್ಲೇ ಮಾತ್ರ. ನೀನು ಆ ಕುರ್ಚಿಯಲ್ಲಿ ಏನನ್ನೋ ಯೋಚಿಸುತ್ತಾ ಕುಳಿತಾಗ ನನಗೆ ಅಪ್ಪನೇ ನೋಡಿದ ಹಾಗೆ ಅನಿಸಿತು. ನೀನು ಏನು ಮಾಡ್ಬೇಕು ಅಂತ ಯೋಚಿಸಿದ್ದೀಯೋ ಅದನ್ನು ಧೈರ್ಯದಿಂದ ಮಾಡು, ನಾನು ನಿನ್ನ ಹಿಂದೆ ಇರುತ್ತೀನಿ (ಎಂದು ಅವಳ ಭುಜ ತಟ್ಟುತ್ತಾ ಹೇಳಿದ).

ಇದನ್ನು ಕೇಳಿ ದುರ್ಗಾಗೆ ತುಂಬ ಖುಷಿ ಆಯ್ತು. ಅವಳು ಶಿವರಾಜನ ಕಾಲಿಗೆ ಬಿದ್ದು ಆಶೀರ್ವಾದ ತೆಗೆದುಕೊಂಡಳು.

ಶಿವರಾಜ : ನೀನು ಏನು ಅಂದುಕೊಂಡಿದ್ದೀಯೋ ಅದು ಖಂಡಿತ ನೆರವೇರುತ್ತೆ, ಯೋಚಿಸ ಬೇಡ (ಎಂದು ಹೇಳಿದ).

ಸುಲೋಚನಗೆ ತುಂಬ ಖುಷಿ ಆಯ್ತು. (ಆದಷ್ಟು ಬೇಗ ಎಲ್ಲವೂ ಒಳ್ಳೆಯದಾಗಿ ಒಡೆದ ನನ್ನ ಕುಟುಂಬ ಮತ್ತೆ ಒಂದಾಗೋ ಹಾಗೆ ಮಾಡಪ್ಪ) ಎಂದು ದೇವರಲ್ಲಿ ಕೇಳಿಕೊಂಡಳು.

ಈ ಕಡೆ ನಾರಾಯಣ ಶೌರ್ಯ ಮತ್ತು ವಿನೀತ್ ಅವರನ್ನು ಮನೆಗೆ ಊಟಕ್ಕೆ ಕರೆಸಿದ್ದ.

ನಾರಾಯಣ ಪೇಪರ್ ಓದುತ್ತಾ ಕುಳಿತಿದ್ದ, ಲಕ್ಷ್ಮಿ ಅಡುಗೆ ಮಾಡುತ್ತಿದ್ದಳು ಮತ್ತು ಆ ದಿನ ರಾಘವೇಂದ್ರ ಆಫೀಸಿಗೆ ರಜೆ ಹಾಕಿದ್ದರಿಂದ ಅವನು ಅಮ್ಮನಿಗೆ ಅಡುಗೆಗೆ ಸಹಾಯ ಮಾಡುತ್ತಿದ್ದ.

ಬಾಗಿಲು ಬಡಿಯೋ ಶಬ್ದ ಕೇಳಿಸಿತು. ನಾರಾಯಣ ಹೊರಗೆ ನೋಡಿದ, ಅಲ್ಲಿ ಶೌರ್ಯ ಮತ್ತು ವಿನೀತ್ ನಿಂತಿದ್ದರು.

ನಾರಾಯಣ : ಅರೆ ಬನ್ನಿ, ನಿಮಗಾಗಿ ಕಾಯ್ತಾ ಇದ್ದೆ.

ವಿನೀತ್ : ಹೇಗಿದ್ದೀರ ಅಂಕಲ್ (ಎಂದು ನಮಸ್ಕರಿಸಿದ).

ನಾರಾಯಣ : ಚೆನ್ನಾಗಿದ್ದೀನಪ್ಪ, ನೀವಿಬ್ಬರು ಹೇಗಿದ್ದೀರ?

ಶೌರ್ಯ : ಚೆನ್ನಾಗಿದ್ದೀವಿ ಅಂಕಲ್, ಹೌದು ದುರ್ಗಾ ಇನ್ನೂ ಟ್ರಿಪ್‌ನಿಂದ ಬಂದಿಲ್ಲವಾ?

ನಾರಾಯಣ : ಆದಷ್ಟು ಬೇಗ ಬರ್ತಾಳೆ, ನೀನು ಯೋಚಿಸ ಬೇಡ (ಎಂದು ಮುಗುಳ್ನಗುತ್ತಾ ಹೇಳಿದ).

ಶೌರ್ಯ : ಅಯ್ಯೋ ಇಲ್ಲ ಅಂಕಲ್ ನಾನು ಸುಮ್ಮನೆ ಕೇಳಿದೆ.

ಲಕ್ಷ್ಮಿ : ಊಟ ತಯಾರಾಗಿದೆ ಎಲ್ಲರೂ ಬನ್ನಿ.

ಎಲ್ಲರೂ ಊಟಕ್ಕೆ ಅಂತ ಹೋದರು.

ವಿನೀತ್ : ಅರೆ ರಾಘವೇಂದ್ರ ನೀನು ಅಡುಗೆ ಮಾಡುತ್ತೀಯಾ?

ರಾಘವೇಂದ್ರ : ಹೌದು ಇವತ್ತು ಆಫೀಸಿಗೆ ರಜೆ ಇತ್ತು, ಹೀಗಾಗಿ ಅಮ್ಮ ಒಬ್ಬಳೇ ಇದ್ದಳಲ್ಲ ಅದಕ್ಕೆ ಸಹಾಯ ಮಾಡ್ತಾ ಇದ್ದೀನಿ.

ಎಲ್ಲರೂ ಊಟ ಮಾಡಿದರು, ಶೌರ್ಯ ಮತ್ತು ವಿನೀತ್ಗೆ ಊಟ ತುಂಬ ಇಷ್ಟ ಆಯ್ತು.

ಶೌರ್ಯ : ಅಂಟಿ ಊಟ ತುಂಬ ಚೆನ್ನಾಗಿತ್ತು, ನಾವು ಈಗ ಹೊರಡುತ್ತೇವೆ (ಎಂದು ಬಾಗಿಲತ್ತ ನಡೆದು ಹೋದರು, ಆಗ ನಾರಾಯಣ ಅವರನ್ನು ತಡೆದನು).

ನಾರಾಯಣ : ನನ್ನನ್ನು ಇಬ್ಬರೂ ಕ್ಷಮಿಸಿ(ಅವರಿಬ್ಬರ ಮುಂದೆ ಕೈ ಜೋಡಿಸಿ ಕ್ಷಮೆ ಕೇಳಿದ).

ಶೌರ್ಯ : ಯಾಕೆ ಅಂಕಲ್ ನೀವು ಯಾಕೆ ಕ್ಷಮೆ ಕೇಳ್ತಿದ್ದೀರ?

ನಾರಾಯಣ : ದುರ್ಗಾ ಮೇಲೆ ಆಸಿಡ್ ಹಾಕಿದ್ದು ನೀವು ಅಂತ ನಾನು ಮತ್ತು ದುರ್ಗಾ ಅಂದುಕೊಂಡಿದ್ದೇವೆ, ಅದು ತಪ್ಪು ಅಂತ ಈಗ ಗೊತ್ತಾಯ್ತು.

ಶೌರ್ಯ : ಏನು ಆಸಿಡ್ ಯಾರು ಹಾಕಿದ್ರು ಅಂತ ಗೊತ್ತಾಯ್ತಾ (ಎಂದು ಆಶ್ಚರ್ಯದಿಂದ ಕೇಳಿದ)?

ನಾರಾಯಣ : ಹೌದು ಗೊತ್ತಾಯ್ತು, ನಿನ್ನೆ ದುರ್ಗಾ ನನಗೆ ಅದ್ರ ಬಗ್ಗೆ ಹೇಳಿದಳು, ದಯವಿಟ್ಟು ನನ್ನನ್ನು ಕ್ಷಮಿಸಿ.

ವಿನೀತ್ : ಅಯ್ಯೋ ಪರವಾಗಿಲ್ಲ ಅಂಕಲ್, ನಾವು ಈಗ ಹೊರಡುತ್ತೇವೆ (ಎಂದು ಗಡಿಬಿಡಿಯಿಂದ ಹೊರಡಲು ಮುಂದಾದರು).

ನಾರಾಯಣ : ಅರೆ ನೀವು ಎಲ್ಲೂ ಹೋಗೋ ಹಾಗಿಲ್ಲ, ನಾವು ಎಲ್ಲರೂ ಇವತ್ತು ನಮ್ಮ ಹಳ್ಳಿಗೆ ಹೋಗ್ತಾ ಇದ್ದೀವಿ, ನೀವಿಬ್ಬರೂ ಬರಲೇಬೇಕು.

ವಿನೀತ್ : ಅಯ್ಯೋ ಅಂಕಲ್ ನಾವಿಬ್ಬರು ಯಾಕೆ, ಅಷ್ಟಕ್ಕೂ ನಿಮ್ಮ ಹಳ್ಳಿಯಲ್ಲಿ ಯಾರೂ ನಮಗೆ ಪರಿಚಯ ಇಲ್ಲ, ಅಷ್ಟು ಸರಿಯಾಗಿ ಅನಿಸೋಲ್ಲ, ನೀವು ಹೋಗಿ ಬನ್ನಿ.

ನಾರಾಯಣ : ಅರೆ ಅದು ಹೇಗೆ ಆಗುತ್ತೆ, ನಿಮ್ಮ ಹೋಟೆಲ್ಗೆ ನಿಮ್ಮ ಪರಿಚಯ ಇಲ್ಲದಿದ್ದರೂ ಶೌರ್ಯನ ಮಾತಿಗೆ ಬೆಲೆ ಕೊಟ್ಟು ನಾವು ಎಲ್ಲರೂ ಬಂದ್ವಿ ಅಲ್ವಾ, ಈಗ ನೀವು ಬರಲೇಬೇಕು.

ಶೌರ್ಯ : ಸರಿ ಅಂಕಲ್ ಬರ್ತೀವಿ (ಅಂತ ಹೇಳಿ ಯಾರಿಗೋ ಕರೆ ಮಾಡಲು ಹೊರಗೆ ಹೋದ, ಅಷ್ಟರಲ್ಲಿ ನಾರಾಯಣ ಅವರಿಬ್ಬರ ಫೋನ್ ಕಸಿದುಕೊಂಡ).

ನಾರಾಯಣ : ನೋಡಿ ನಾವು ವಾಹನ ಬುಕ್ ಮಾಡಿದ್ದೀವಿ, ಇಲ್ಲಿ ಯಾರೂ ಅವರ ಫೋನ್ ಬಳಕೆ ಮಾಡೋ ಹಾಗಿಲ್ಲ, ಎಲ್ಲರೂ ಖುಷಿಯಿಂದ ಮಸ್ತಿ ಮಾಡ್ತಾ ಹೋಗೋಣ (ಎಂದು ಎಲ್ಲರ ಮೊಬೈಲ್ ಅನ್ನು ಒಂದು ಚೀಲದಲ್ಲಿ ಕಟ್ಟಿ ತನ್ನ ಬಳಿ ಇಟ್ಟುಕೊಂಡ).

ರಾಘವೇಂದ್ರ : ಸರಿಯಾಗಿ ಹೇಳ್ದ್ರಿ ಅಪ್ಪ, ತುಂಬ ದಿನ ಆಯ್ತು ಏನೂ ಮಸ್ತಿ ಕೆಲಸ ಮಾಡಿಲ್ಲ, ಈಗ ಈ ಟ್ರಿಪ್‌ನಲ್ಲಿ ಮಜಾ ಮಾಡೋಣ (ಎಂದು ತುಂಬ ಖುಷಿಯಿಂದ ಹೇಳಿದ).

ವಿನೀತ್ & ಶೌರ್ಯ : ಸರಿ (ಎಂದು ನಗುತ್ತಾ ಹೇಳಿದರು).

ಮುಂದೆ ಹಳ್ಳಿಯಲ್ಲಿ ಏನು ನಡೆಯಿತು, ಸತ್ಯ ಹೇಗೆ ಹೊರಬಂತು ಅನ್ನೋದನ್ನ ಮುಂದಿನ ಅಧ್ಯಾಯದಲ್ಲಿ ನೋಡೋಣ....