Avala Horata - 11 in Kannada Motivational Stories by Anjana A Kulkarni books and stories PDF | ಅವಳ ಹೋರಾಟ - 11

Featured Books
Categories
Share

ಅವಳ ಹೋರಾಟ - 11

(ಪ್ರಸಾದ್ ಮತ್ತು ದುರ್ಗಾ ಇಬ್ಬರೂ ಅವರ ಹಳ್ಳಿಗೆ ಹೋದರು, ಅವರ ಊರಿನ ಹೆಸರು ರಾಮಪುರ ಅಂತ)

ದುರ್ಗಾ : ಅರೆ ಈ ಊರನ್ನು ನೋಡಿದರೆ ಯಾರೂ ಹಳ್ಳಿ ಅನ್ನಲ್ಲ, ಅಲ್ಲ ಅಣ್ಣ ಹಳ್ಳಿ ಅಂದರೆ ಹಸಿರು ಹಸಿರಾಗಿ ಎಷ್ಟು ಚೆನ್ನಾಗಿರುತ್ತೆ, ಆದರೆ ಇದು ಬರಡು ಭೂಮಿ ಹಾಗೆ ಇದೆ, ಸ್ವಲ್ಪವೂ ಹಳ್ಳಿ ಕಳೆನೇ ಇಲ್ಲ.

ಪ್ರಸಾದ್ : ಅಜ್ಜ ತೀರಿಕೊಳ್ಳೋ ಮುಂಚೆ ಈ ಊರು ತುಂಬಾ ಚೆನ್ನಾಗಿತ್ತು, ಅಮೇಲೆ ಹಿರಿಯರು ಯಾರೂ ಇಲ್ಲದಿರುವ ಕಾರಣ ಈ ಊರು ಹೀಗಾಗಿದೆ ಅಂತ ಅಜ್ಜಿ ನನಗೆ ಆಗಾಗ ಹೇಳ್ತಾ ಇದ್ದಳು.

ಸರಿಯಾಗಿ ಹೇಳ್ದೆ ಕಣಪ್ಪ (ಎಂದು ಹಿಂದಿನಿಂದ ಯಾರೋ ಹೇಳಿದರು, ಆ ಧ್ವನಿ ಕೇಳಿ ಇಬ್ಬರೂ ಹಿಂದೆ ತಿರುಗಿದರು).

ದುರ್ಗಾ : ಕ್ಷಮಿಸಿ ನೀವು ಯಾರು ಅಂತ ನಮಗೆ ಗೊತ್ತಾಗಲಿಲ್ಲ.

ಭೀಮಪ್ಪ : ನನ್ನ ಹೆಸರು ಭೀಮಪ್ಪ ಅಂತ, ನೀವು ಅನಂದರಾವ್ ಅವರ ಮೊಮ್ಮಕ್ಕಳು ಅಲ್ಲವಾ?

ಪ್ರಸಾದ್ : ನಿಮಗೆ ಹೇಗೆ ಗೊತ್ತಾಯ್ತು?

ಭೀಮಪ್ಪ : ನೀವು ಮಾತಾಡಿದ್ದು ಕೇಳಿಸಿಕೊಂಡೆ, ಹಾಗಾಗಿ ಊಹೆ ಮಾಡಿದೆ ಅಷ್ಟೆ.

ದುರ್ಗಾ : ಹೌದು ಅಜ್ಜ, ಇವನು ಪ್ರಸಾದ್ ಅಂತ, ನಮ್ಮ ಅಜ್ಜನ ದೊಡ್ಡ ಮಗ ಇದ್ದರಲ್ಲ ಶಿವರಾಜ್ ಅಂತ ಅವರ ಮಗ.

ಪ್ರಸಾದ್ : ಇವಳು ದುರ್ಗಾ ಅಂತ, ಅಜ್ಜನ ಎರಡನೇ ಮಗ ನಾರಾಯಣ ಅಂತ ಅವರ ಮಗಳು.

ಭೀಮಪ್ಪ : ಏನು ನೀನು ನಾರಾಯಣನ ಮಗಳಾ?

ದುರ್ಗಾ : ಹೌದು ಅಜ್ಜ, ಯಾಕೆ ಏನಾಯ್ತು?

ಭೀಮಪ್ಪ : ನಿಮ್ಮ ಅಪ್ಪ ಮತ್ತು ಲಕ್ಷ್ಮವ್ವ ಚೆನ್ನಾಗಿ ಇದ್ದಾರಲ್ವಾ? ಅವರಿಗೆ ಏನೂ ತೊಂದರೆ ಆಗಿಲ್ಲ ತಾನೆ?

ದುರ್ಗಾ : ಇಲ್ಲ ಅಜ್ಜ, ಹುಷಾರಾಗಿ ಇದ್ದಾರೆ, ಯಾಕೆ ಹೀಗೇ ಕೇಳ್ತಿದ್ದೀರಾ?

ಭೀಮಪ್ಪ : ನಿನ್ನೆ ರಮೇಶ್ ಫೋನ್‌ನಲ್ಲಿ ಯಾರ ಜೊತೆಯೋ ನಿಮ್ಮ ಅಪ್ಪನ ಬಗ್ಗೆ ಮಾತಾಡ್ತಿರೋದನ್ನು ನಾನು ಕೇಳಿಸಿಕೊಂಡೆ, ಅದಕ್ಕೇ ಕೇಳ್ದೆ.

ದುರ್ಗಾ ಮತ್ತು ಪ್ರಸಾದ್ ಇಬ್ಬರೂ ಒಬ್ಬರಿಗೊಬ್ಬರು ಮುಖ ನೋಡಿಕೊಂಡರು.

ದುರ್ಗಾ : ಅದೇ ವಿಷಯದ ಬಗ್ಗೆ ವಿಚಾರಿಸೋಕೆ ನಾವಿಬ್ಬರೂ ಇಂದು ಹಳ್ಳಿಗೆ ಬಂದಿದ್ದು ಅಜ್ಜ.

ಭೀಮಪ್ಪ : ಓ ಹೌದಾ?

ಪ್ರಸಾದ್ : ಅಜ್ಜ ನಿಮಗೆ ಆ ರಮೇಶನ ಮಕ್ಕಳ ಬಗ್ಗೆ ಏನಾದರೂ ಗೊತ್ತಾ? ಗೊತ್ತಿದ್ದರೆ ಹೇಳಿ.

ಭೀಮಪ್ಪ : ಹೌದು ಅವನಿಗೆ ಇಬ್ಬರು ಮಕ್ಕಳು, ಒಬ್ಬ ರಾಜೇಶ್ ಇನ್ನೊಬ್ಬ ಸುರೇಶ್ ಅಂತ.

ದುರ್ಗಾ : ಹೌದಾ, ಅವರ ಕುಟುಂಬದಲ್ಲಿ ಇನ್ನೂ ಯಾರಾದರೂ ಇದ್ದಾರಾ?

ಭೀಮಪ್ಪ : ಇಲ್ಲಮ್ಮ, ಅವರಿಬ್ಬರನ್ನು ಬಿಟ್ಟರೆ ಬೇರೆ ಯಾರೂ ಇಲ್ಲ, ಅವರಿಗೆ ಇನ್ನೂ ಮದುವೆಯೂ ಆಗಿಲ್ಲ.

ಪ್ರಸಾದ್ : ಈಗ ಅವರು ಎಲ್ಲಿದ್ದಾರೆ?

ಭೀಮಪ್ಪ : ಅವರು ಈ ಊರಲ್ಲಿಲ್ಲಪ್ಪ, ಓದೋಕೆ ಅಂತ ಪಟ್ಟಣಕ್ಕೆ ಹೋಗಿದ್ದಾರೆ.

ದುರ್ಗಾ ಏನೋ ಯೋಚನೆ ಮಾಡಕ್ಕೆ ಶುರು ಮಾಡಿದಳು.

ಪ್ರಸಾದ್ : ದುರ್ಗಾ ಏನು ಯೋಚನೆ ಮಾಡ್ತಿದ್ದೀಯ?

ದುರ್ಗಾ : ಏನಿಲ್ಲ.

ಭೀಮಪ್ಪ : ಇದೋ ಅಲ್ಲಿ ಹೋಗ್ತಿದ್ದಾನಲ್ಲ ಅವನೇ ರಮೇಶ್ ಅಂತ.

ಅವನನ್ನು ನೋಡಿದ ತಕ್ಷಣ ದುರ್ಗಾ ಪ್ರಸಾದ್ ಮತ್ತು ಭೀಮಪ್ಪನನ್ನು ಕರೆದುಕೊಂಡು ಬಚ್ಚಿಕೊಂಡಳು.

ಪ್ರಸಾದ್ : ಯಾಕೆ ದುರ್ಗಾ ಏನಾಯ್ತು?

ದುರ್ಗಾ : ನಾವು ಇಲ್ಲಿ ಬಂದಿದ್ದು ಅವನಿಗೆ ಯಾವ ಕಾರಣಕ್ಕೂ ಗೊತ್ತಾಗಬಾರದು, ಅಜ್ಜ ನೀವು ನಮಗೆ ಒಂದು ಸಹಾಯ ಮಾಡಬೇಕು.

ಭೀಮಪ್ಪ : ಅದೇನು ಹೇಳವ್ವ?

ದುರ್ಗಾ : ಆ ರಮೇಶನ ಮನೆ ಯಾವುದು ಅಂತ ನಿಮಗೆ ಗೊತ್ತಾ?

ಭೀಮಪ್ಪ : ಹೌದು, ಇದೋ ಅಲ್ಲೇ ಕಾಣಿಸ್ತಿದೆ ಅಲ್ಲ ಚಿಕ್ಕ ಗುಡಿಸಲು ಅದೇ ಅವರ ಮನೆ.

ದುರ್ಗಾ : ಅಜ್ಜ ನೀವು ಅವನ ಜೊತೆ ಸ್ವಲ್ಪ ಮಾತಾಡುತ್ತಾ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ, ಅಷ್ಟರಲ್ಲಿ ನಾವಿಬ್ಬರೂ ಆ ಮನೆಗೆ ಹೋಗಿ ಏನಾದರೂ ಸಿಗುತ್ತದಾ ಅಂತ ನೋಡುತ್ತೇವೆ.

ಪ್ರಸಾದ್ : ದುರ್ಗಾ ಇದು ತುಂಬಾ ರಿಸ್ಕಿ, ಅವನಿಗೆ ಏನಾದರೂ ಕ್ಲೂ ಸಿಕ್ಕರೂ ತುಂಬಾ ತೊಂದರೆ ಆಗುತ್ತೆ, ಊರಲ್ಲ ಚಿಕ್ಕಪ್ಪ ಚಿಕ್ಕಮ್ಮಗೆ ಏನಾದರೂ ತೊಂದರೆ ಆದರೆ?

ದುರ್ಗಾ : ಅಷ್ಟು ಸುಲಭವಾಗಿ ನಮ್ಮ ಅಪ್ಪನನ್ನು ಯಾರೂ ಮುಟ್ಟೋಕೆ ಆಗಲ್ಲ, ನೀನು ಏನು ತಲೆ ಕೆಡಿಸ್ಕೋಬೇಡ, ಧೈರ್ಯವಾಗಿರು.

ಭೀಮಪ್ಪ : ಸರಿಯಾಗಿ ಹೇಳ್ದಳು ದುರ್ಗಾವ್ವ, ಅದು ಅನಂದರಾವ್ ಅವರ ರಕ್ತ ಕಣಪ್ಪ, ಅಷ್ಟು ಸುಲಭವಾಗಿ ಯಾರೂ ಏನೂ ಮಾಡಕ್ಕೆ ಆಗಲ್ಲ.

ದುರ್ಗಾ : ಅಜ್ಜ ಹೋಗಿ ಮಾತಾಡಿಸಿ.

ಭೀಮಪ್ಪ ರಮೇಶ್‌ನನ್ನು ಮಾತಾಡಿಸುತ್ತಾ ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋದ, ಈ ಕಡೆ ದುರ್ಗಾ ಮತ್ತು ಪ್ರಸಾದ್ ಅವನ ಮನೆ ಒಳಗೆ ನುಗ್ಗಿದರು. ಅದು ತುಂಬಾ ಚಿಕ್ಕ ಗುಡಿಸಲು, ಅಲ್ಲಿ ಏನೂ ಮಚ್ಚಿಟ್ಟರೂ ಸುಲಭವಾಗಿ ಸಿಗುತ್ತಿತ್ತು.

ಪ್ರಸಾದ್ : ದುರ್ಗಾ ಇಷ್ಟು ಚಿಕ್ಕ ಗುಡಿಸಲಲ್ಲಿ ಅವನು ಏನು ಮಚ್ಚಿಡೋಕೆ ಸಾಧ್ಯವೇ ಇಲ್ಲ (ಎಂದು ನಗಲು ಶುರು ಮಾಡಿದ).

ದುರ್ಗಾ : "ಯಾವ ಹುತ್ತಿನಲ್ಲಿ ಯಾವ ಹಾವು ಇದೆ ಅಂತ ಯಾರೂ ಹೇಳೋಕಾಗಲ್ಲ" (ಎಂದು ಹುಡುಕಲು ಶುರು ಮಾಡಿದಳು).

ಪ್ರಸಾದ್ : ದುರ್ಗಾ ಇದೋ ಈ ಫೋಟೋ ನೋಡು, ಇವನೇ ರಾಮಪ್ಪ ಇರಬೇಕು.

ದುರ್ಗಾ ಆ ಫೋಟೋವನ್ನು ತೆಗೆದುಕೊಂಡು ಜೇಬಿನಲ್ಲಿ ಇಟ್ಟುಕೊಂಡಳು. ನಂತರ ಇನ್ನೊಂದು ಫೋಟೋ ಸಿಕ್ಕಿತು, ಅದನ್ನು ನೋಡಿ ದುರ್ಗೆಗೆ ಆಶ್ಚರ್ಯ ಆಯಿತು (ದುರ್ಗಾ ತನ್ನ ಮೊಬೈಲ್‌ನಲ್ಲಿ ಫೋಟೋ ತೆಗೆದುಕೊಂಡಳು). ಏನೋ ಶಬ್ದವಾದಂತಾಯಿತು, ಕೂಡಲೇ ಎಲ್ಲವನ್ನೂ ಅದೇ ಜಾಗದಲ್ಲಿ ಇಟ್ಟು ಇಬ್ಬರೂ ಅಲ್ಲಿಂದ ಓಡಿದರು.

ಭೀಮಪ್ಪ : ಏನಾದರೂ ಸಿಕ್ಕಿತ್ತಾ ಅವ್ವ?

ದುರ್ಗಾ : ಅಷ್ಟೇನೂ ಸಿಗಲಿಲ್ಲ, ಆಯ್ತು ನಾವು ಹೊರಡ್ತೀವಿ ಅಜ್ಜ.

ಭೀಮಪ್ಪ : ಆಯ್ತು, ಆಗಾಗ ಹಳ್ಳಿಗೆ ಬರುತ್ತಾ ಇರಿ.

ಪ್ರಸಾದ್ : ಸರಿ ಅಜ್ಜ, ನಾವು ಹೋಗಿ ಬರುತ್ತೀವಿ.

ಇಬ್ಬರೂ ಅಲ್ಲಿಂದ ಮನೆಗೆ ಹೋದರು. ದುರ್ಗಾ ಆ ಫೋಟೋವನ್ನು ನಾರಾಯಣನಿಗೆ ಕಳಿಸಿದ್ಳು.

ಮನೆಯಲ್ಲಿ ಸುಲೋಚನ ಸುಮ್ಮನೆ ಕೂತಿದ್ದಳು. ದುರ್ಗಾ ಅಲ್ಲಿಗೆ ಬಂದು ಅವಳ ಮುಂದೆ ಕೂತುಕೊಂಡಳು.

ದುರ್ಗಾ : ಅಜ್ಜಿ ಇದು ರಾಮಪ್ಪನಲ್ಲವಾ ಅಂತ ನೋಡಿ ಹೇಳಿ (ಎಂದು ಫೋಟೋ ತೋರಿಸಿದಳು).

ಸುಲೋಚನ : (ಆ ಫೋಟೋವನ್ನು ಗಮನವಾಗಿ ನೋಡುತ್ತಾ) ಹೌದು ಇವನೇ ಆ ಪಾಪಿ, ನಿಮ್ಮ ಅಜ್ಜನನ್ನು ಕೊಂದಿದ್ದು ಇವನೇ (ಎಂದು ರೋಷದಿಂದ ಹೇಳಿದಳು).

ದುರ್ಗಾ ಅಲ್ಲಿಂದ ಹೊರಟಳು. ಅವಳ ಮುಖದಲ್ಲಿ ಏನೋ ಸಾಧಿಸಿದೆ ಅನ್ನೋ ಕಳೆ ಇತ್ತು. ಅವಳು ಖುಷಿಯಿಂದ ನಾರಾಯಣನಿಗೆ ಕರೆ ಮಾಡಿದಳು.

ನಾರಾಯಣ : ಹೆಲೋ ದುರ್ಗಾ.

ದುರ್ಗಾ : ಅಪ್ಪ ನನ್ನ ಅನುಮಾನ ನಿಜ ಆಯ್ತು.

ನಾರಾಯಣ : ಹ್ಮ್, ಆ ಫೋಟೋ ನಾನು ನೋಡಿದೆ. ಈಗ ಮುಂದೆ ಏನು ಮಾಡೋದು? ಪೋಲೀಸ್‌ಗೆ ಹೇಳೋಣವಾ?

ದುರ್ಗಾ : ಇಲ್ಲ ಅಪ್ಪ, ಇದನ್ನು ಇಷ್ಟು ಸುಲಭವಾಗಿ ಮಾಡಿದರೆ ನನಗೆ ತೃಪ್ತಿ ಸಿಗಲ್ಲ. ಅವರು ಮಾಡಿದ ತಪ್ಪನ್ನು ಊರಿನ ಜನರ ಮುಂದೆ ಅವರು ಒಪ್ಪಿಕೊಳ್ಳುವ ಹಾಗೆ ಮಾಡ್ತೀನಿ. ಇನ್ನೊಂದು ಎರಡು ದಿನದಲ್ಲಿ ನೀವು ಎಲ್ಲರನ್ನು ಕರೆದುಕೊಂಡು ಊರಿಗೆ ಬನ್ನಿ. ಯಾರಿಗೂ ಇದ್ರ ಬಗ್ಗೆ ಗೊತ್ತಾಗಬಾರದು.

ನಾರಾಯಣ : ಸರಿ.

ತಪ್ಪು ಯಾರು ಮಾಡಿದರು, ಅವರ ದ್ವೇಷಕ್ಕೆ ಕಾರಣ ಏನು ಎಂಬುದನ್ನು ಮುಂದಿನ ಅಧ್ಯಾಯದಲ್ಲಿ ನೋಡೋಣ....